ಜೈ ಮಹಾರಾಷ್ಟ್ರ ನಾಮಫಲಕ ತೆರವು ಮಾಡಿದ ಪಾಲಿಕೆ ಅಧಿಕಾರಿಗಳು
ಬೆಳಗಾವಿಯಲ್ಲಿ ಗಡಿ, ಭಾಷೆ ವಿಚಾರ ಮುಂದೆ ಇಟ್ಟುಕೊಂಡು ಕಿರಿಕ್ ಮಾಡುತ್ತಿದ್ದ ಎಂಇಎಸ್ ಪುಂಡರಿಗೆ ಪಾಲಿಕೆ ಅಧಿಕಾರಗಳು ಶಾಕ್ ಕೊಟ್ಟಿದ್ದಾರೆ.
ಬೆಳಗಾವಿ ತಾಲೂಕಿನ ಅನಗೋಳ ಗ್ರಾಮದಲ್ಲಿ ಅಳವಡಿಸಿದ್ದ ವಿವಾದಿತ ಜೈ ಮಹಾರಾಷ್ಟ್ರ ಬೋರ್ಡ್ನ್ನು ರಾತ್ರಿ ಪಾಲಿಕೆ ಅಧಿಕಾರಿಗಳು ತೆರವು ಮಾಡಿದ್ದಾರೆ.
ವಿವಿಧ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಿ, ವಿವಾದಾತ್ಮಕ ಜೈ ಮಹಾರಾಷ್ಟ್ರ ನಾಮಫಲಕ ಕೂಡಲೇ ತೆರವುಗೊಳಿಸುವಂತೆ ಒತ್ತಾಯಿಸಿದ್ದರು. ಹಲವು ಒತ್ತಾಯದ ಮೇರೆಗೆ ಸದ್ಯ ಮಹಾನಗರ ಪಾಲಿಕೆ ಸಿಬ್ಬಂದಿ ನಾಮಫಲಕವನ್ನು ತೆರವುಗೊಳಿಸಿದ್ದಾರೆ.
ಮತ್ತೊಂದೆಡೆ ಕರವೇ ಕಾರ್ಯಕರ್ತರು ಅನಗೋಳ ಚಲೋ ಕಾರ್ಯಕ್ರಮ ಮಾಡುವ ಎಚ್ಚರಿಕೆ ನೀಡಿದ್ದರು. ಪರಿಸ್ಥಿತಿ ಗಂಭೀರತೆ ಅರಿತ ಪಾಲಿಕೆ ಅಧಿಕಾರಿಗಳು ಈ ಎಲ್ಲ ಕನ್ನಡಪರ ಹೋರಾಟಗಾರರ ಹೋರಾಟಕ್ಕೆ ಮಣಿದು ಮಹಾನಗರ ಪಾಲಿಕೆ ಆಯುಕ್ತ ಲೋಕೇಶ್ ಅವರ ಸೂಚನೆ ಮೇರೆಗೆ ವಿವಾದಿತ ನಾಮಫಲಕವನ್ನು ತೆರವುಗೊಳಿಸಿದ್ದಾರೆ.
2014 ರಲ್ಲಿ ಬೆಳಗಾವಿ ತಾಲೂಕಿನ ಯಳ್ಳೂರ ಗ್ರಾಮದಲ್ಲಿ ಎಂಇಎಸ್ ಪುಂಡರು ಮಹಾರಾಷ್ಟ್ರ ರಾಜ್ಯ ಎಂದು ಬೋರ್ಡ್ ಹಾಕಿದ್ದರು. ಹೀಗಾಗಿ, ಕನ್ನಡ ಹೋರಾಟಗಾರ ಭೀಮಪ್ಪ ಗಡಾದ ಹೋರಾಟ ನಡೆಸಿ ತೆರವು ಮಾಡುವಂತೆ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದ್ದರು. ಸಾರ್ವಜನಿಕರ ಹಿತ ದೃಷ್ಟಿಯಿಂದ ಸುಪ್ರೀಂ ಕೋರ್ಟ್ ತೆರವು ಮಾಡಲು ಆದೇಶ ನೀಡಿತ್ತು. ಕೋರ್ಟ್ ಆದೇಶ ನೀಡಿದ್ದರಿಂದ ಅವತ್ತು ಅದನ್ನ ತೆರವು ಮಾಡಿದ್ದು ಇಲ್ಲಿ ಸ್ಮರಿಸಬಹುದು. ಈಗ ಜೈ ಮಹಾರಾಷ್ಟ್ರ ಬೋರ್ಡ್ ಹಾಕಿದ್ದನ್ನ ವಿರೋಧಿಸಿ ಪ್ರತಿಭಟನೆ ಕಾವು ಜೋರಾಗುತ್ತಿದ್ದಂತೆ ಬೋರ್ಡ ತೆರವು ಮಾಡಿದ್ದಾರೆ.